Monday, January 14, 2019

ತುಳುನಾಡ ಅಮರ್ ಬೊಳ್ಳಿಲು ಕಾಂತಬಾರೆ ಬುದಾಬಾರೆ ಶಕ್ತಿಲ್ನ ಕಥೆ

ಕಾಂತಬಾರೆ ಬೂದ ಬಾರೆಯರು :

ಮುಲ್ಕಿ ಸೀಮೆಯ ಅವಳಿ ವೀರರಾದ ಕಾಂತಬಾರೆ ಬೂದ ಬಾರೆಯರು ಕೋಟಿ ಚೆನ್ನಯರ ನಂತರದ ಕಾಲ ಘಟ್ಟದಲ್ಲಿ ಹುಟ್ಟಿ ತಮ್ಮದೇಯಾದ ಇತಿಹಾಸ ಸೃಷ್ಟಿಸಿದರು.

ಮುಲ್ಕಿ ಸೀಮೆಯ ಸಾಮಂತರಸರ ಆಳ್ವಿಕೆಯ ಚಂದ್ರರಾಜ ಬಲ್ಲಾಳನು ಮುಲ್ಕಿ ಕೊಲ್ಲೂರಿನ ಸೀಮಂತೂರಿನಲ್ಲಿ ರಾಜ್ಯಭಾರ ಮಾಡಿಕೊಂಡಿದ್ದನು. ಅವನ ಪಟ್ಟದ ರಾಣಿ ಪುಲ್ಲ ಪೆರ್ಗಡ್ತಿ, ಮಕ್ಕಳಿಲ್ಲದ ಇವರು ಸಂತಾನ ಭಾಗ್ಯಕ್ಕಾಗಿ ಕದ್ರಿ ಮಂಜುನಾಥನಿಗೆ ಹರಕೆ ಸಲ್ಲಿಸಲು ಪರಿಹಾರ ಸಮೇತರಾಗಿ ದಂಡಿಗೆಯಲ್ಲಿ ಹೋಗುವಾಗ ಸುರತ್ಕಲ್ ಕಜೇರಿ ಎಂಬಲ್ಲಿ ಹೊಲ ಕಾಯುತ್ತಿದ್ದ ಏಳರ ಹರೆಯದ ಬಿಲ್ಲವ ಬಾಲಕಿ ಆಚು ಮಾತಿನ ಚತುರೋಕ್ತಿಗಳಿಗೆ ಮನಸೋತರು. ಹಿಂದಿರುಗಿ ಬರುವಾಗ ಅವಳ ಹಿರಿಯರ ಮನ ಒಪ್ಪಿಸಿ ಆಕೆಯನ್ನು ತಮ್ಮೊಂದಿಗೆ ಬೀಡಿಗೆ ಕರೆ ತರುತ್ತಾರೆ. ಆಕೆಯ ಜೊತೆಯಲ್ಲಿ ಬಂದ ಉಲ್ಲಾಯ ದೈವಕ್ಕೆ ಕೆಳಗಿನ ಗುಡ್ಡೆ ಮನೆಯಲ್ಲಿ ಸ್ಥಾನಕಟ್ಟಿ ಆರಾಧನೆ ಸಲ್ಲಿಸುತ್ತಾರೆ. ಮುಂದೆ ಆಕೆಯನ್ನು ತನ್ನ ಒಕ್ಕಲಾದ ವರಪಾಡಿ ಕುಂದಯ ಬಾರೆಗೆ ಮದುವೆ ಮಾಡಿ ಕೋಡುತ್ತಾರೆ. ಆಚು ಗರ್ಭವತಿಯಾಗಿ ಸೀಮಂತದ ಬಳಿಕ ತವರಿಗೆ ಹೋಗುವ ದಾರಿಯಲ್ಲಿ ಕೊಲ್ಲೂರಿನ ತಾಕಟೆ ಮರದ ಬಳಿ ಹೆರಿಗೆ ನೋವು ಕಾಣಿಸಿಕೊಂಡು ಅಲ್ಲಯೇ ದೈವಾಂಶ ಸಂಭೂತರಾದ ಅವಳಿ ಮಕ್ಕಳಿಗೆ ಜನ್ಮ ನೀಡುತ್ತಾಳೆ, ತಾಕಟೆ ಮರಕ್ಕೆ ತೊಟ್ಟಿಲು ಕಟ್ಟಿ ಶಿಶುಗಳನ್ನು ತೂಗುತ್ತಾಳೆ, ಸುದ್ದಿ ತಿಳಿದ ಪೆರ್ಗಡ್ತಿ, ಬಾಣಂತಿ & ಮಕ್ಕಳನ್ನು ಬೀಡಿಗೆ ಕರೆದೊಯ್ಯುತ್ತಾಳೆ. ಕೆಲವು ದಿನಗಳಲ್ಲಿ ಆಚು ಕೈಲಾಸವಾಸಿಯಾಗುತ್
ತಾಳೆ. ರಾಣಿಯು ಅವಳಿ ಮಕ್ಕಳಿಗೆ ಕಾಂತಾಬಾರೆ ಬೂದಬಾರೆ ಎಂದು ಹೆಸರಿಟ್ಟು ಅಕ್ಕರೆಯಿಂದ ಸಲಹುತ್ತಾರೆ.

ನಂತರದಲ್ಲಿ ಪೆರ್ಗಡ್ತಿಗೂ ಮಕ್ಕಳಾಗುತ್ತದೆ. ಅವಳಿ ಮಕ್ಕಳು ಅಂದಿನ ಪ್ರಸಿದ್ಥ ಗುರುಕುಲವಾಗಿದ್ದ ಹಳೆಯಂಗಡಿ ಹತ್ತಿರದ ದೈಬಿತ್ತಿಲ್(ಸಸಿಹಿತ್ತಿಲು) ಸಾಮಂತ ಗರಡಿಯಲ್ಲಿ ಯುದ್ಥ ವಿದ್ಯಾ ಪಾರಂಗತರಾಗುತ್ತಾರೆ. ಪ್ರಾಯಬದ್ಥರಾಗಿ ಮುಲ್ಕಿ ಸೀಮೆಯ ಗಡಿ ರಕ್ಷಣೆ ಮಾಡುತ್ತಾ, ಶತ್ರುಗಳ ತಂಟೆ ನಿವಾರಿಸುತ್ತಾ ಅರಸರ ಎಡಬಲವಾಗುತ್ತಾರೆ. ಮಾಗಣೆಯಲ್ಲಿ ಹೊಲಗಳನ್ನು ನಿರ್ಮಿಸಿ ಕೃಷಿ ಕಾಯಕ ಮಾಡಿ ಇತರರಿಗೂ ನೆರವಾಗುತ್ತಾರೆ. ಸಾಮಂತರ ರಾಜ್ಯಭಾರ ಸುಸೂತ್ರಗೊಳಿಸಲು, ಗುತ್ತು ಭಾವಗಳನ್ನು ನಿರ್ಮಿಸಿ ಪಹರೆಯವರನ್ನು ನೇಮಿಸಿ ಬೊಕ್ಕಸಕ್ಕೆ ಕಂದಾಯ ಸಂದಾಯದ ಏರ್ಪಾಡು ಮಾಡುತ್ತಾರೆ. ಅರಸರಿಂದ ಕೊಲ್ಲೂರ ಗುಡ್ಡೆಯ ಮರ್ದನಾಯ್ಗರಿಗೆ ಗಡಿ ಪಟ್ಟವನ್ನು ಮಾಡಿಸುತ್ತಾರೆ. ಬಲ್ಲಾಳರು ವಿಧಿವಶರಾದಾಗ ಸೀಮೆಯ ಆಡಳಿತದಲ್ಲಿ ಪೆರ್ಗಡ್ತಿಗೆ ಬೆಂಬಲವಾಗಿ ನಿಂತು ಆಕೆಯ ಮಗಳಾದ ದುಗ್ಗುವಿಗೆ ಐಕಳ ಬಾವದ ಬೀಸಬನ್ನಾರನೊಂದಿಗೆ ವಿವಾಹ ಮಾಡಿಸುತ್ತಾರೆ. ರಾಜ್ಯದ ಮೇಲೆ ದಂಡೆತ್ತಿ ಬಂದ ಮೂಡಬಿದಿರೆಯ ಚೌಟ ಅರಸು ಕುಬೇರನನ್ನು ಎದುರಿಸಿ ವೀರ ದುಗ್ಗಣ್ಣ ಕೊಂಡೆಯನ್ನು ಕೊಂದು ಕುಬೇರನನ್ನು ಸೋಲಿಸುತ್ತಾರೆ.

ಪೆರ್ಗಡ್ತಿ ಪುತ್ರ ಚೆನ್ನರಾಯ ಸಾವಂತನಿಗೆ ಪಟ್ಟ ಕಟ್ಟಿಸಿ, ಪರಂಗಡಿ(ಹಳೆಯಂಗಡಿ) ಬಳಿಯ ಪಡು ಪಣಂಬೂರಿನಲ್ಲಿ ನೂತನ ಅರಮನೆ ನಿರ್ಮಿಸಿ, ತಾವು ಸೀಮೆಯ ಕಾವಲಿಗೆ ನಿಲ್ಲುತ್ತಾರೆ. ಕಾರ್ಕಳದ ಬೈಲಸೂಡ ಅರಸರಿಗೆ ಯುದ್ಥದಲ್ಲಿ ನೆರವಾಗಿ ಜಯ ಒದಗಿಸುತ್ತರೆ. ತಮ್ಮ ಜೊತೆಯಲ್ಲಿ ಬಂದ ಉಳ್ಳಾಯ ಜುಮಾದಿ ಸಾರಮಾನ್ಯ ದೈವಗಳಿಗೆ ಉಳೆಪಾಡಿ ಗುಡ್ಡೆಯಲ್ಲಿ ಸ್ಥಾನ ಕಟ್ಟಿಸಿ ಆರಾಧಿಸುತ್ತಾರೆ. ಗುಡ್ಡೆನಾಯ್ಗರಿಗೆ ನೂರ ಒಂದು ಮುಡಿ ಸಾಗುವಳಿ ಜಮೀನು ಮಾಡಿಕೊಡುತ್ತಾರೆ. ಕೆಳಗಿನ ಗುಡ್ಡೆಯಲ್ಲಿ ಕಾಡು ಕಡಿದು ಏಳು ಎಕರೆ ಬಾಕಿಮಾರು ಗದ್ದೆಗೆ ಪುನಾರು ಪುಚ್ಚಾಡಿ ಬೈಲಿನಿಂದ ಕಾಲುವೆ ನಿರ್ಮಿಸಿ ನೀರು ಒದಗಿಸುತ್ತಾರೆ. ಪಡುಪಣಂಬೂರುನಲ್ಲಿಯೂ ಇಂತಹುದೆ ಕೃಷಿ ಕಾಯಕ ಹಾಗೂ ನೀರಾವರಿ ಏರ್ಪಡಿಸುತ್ತಾರೆ.

ಅಸಾಮಾನ್ಯ ವೀರರಾಗಿ ಮೆರೆದ ಈ ಅವಳಿ ವೀರರು ಕಾಯಬಿಟ್ಟು ಮಾಯಸೇರಿದ ಬಳಿಕ ಅವರನ್ನು ಕಾರಣಿಕ ಪುರುಷರೆಂದು ಆರಾಧಿಸಲಾಯಿತು. ಮುಲ್ಕಿ ಉಳೆಪಾಡಿ ಮಿತ್ತಗುಡ್ಡೆಯಲ್ಲಿ ಕಾಂತಬಾರೆ ಬೂದಬಾರೆ ಗರಡಿಯಿದೆ. ಅವರು ಸ್ಥಾಪಿಸಿದ ದೈವಗಳ ಗರಡಿಯಿದೆ. ಗುಡ್ಡೆ ಸಾನದ ಮನೆಯಲ್ಲಿ ಬಾರೆಯರ ಪಟ್ಟದ ಉಂಗುರ& ಅವರು ಯುದ್ಥಗಳಲ್ಲಿ ಬಳಸುತ್ತಿದ್ದ ಬಿಲ್ಲು ಬಾಣಗಳು ಮುಂತಾದ ಮುವತ್ತೆರಡೂ ಆಯುಧಗಳನ್ನು ರಕ್ಷಿಸಿ ಇಡಲಾಗಿದೆ. ಅವರು ಧರಿಸುತ್ತಿದ್ದ ಉಡುಪುಗಳನ್ನು ಈಗಲೂ ಕಾಯ್ದಿರಿಸಲಾಗಿದೆ. ಅವರ ಕಾಲದ ಆಯತಾಕಾರದ ಮರದ ಪೆಟ್ಟಿಗೆಯೂ ಇದೆ. ವರ್ಷಾವಧಿ ಕಾವೇರಿ ಸಂಕ್ರಮಣದಂದು ಇವುಗಳನ್ನು ಹೊರಗೆ ತೆಗೆದು ಪೂಜೆ ಪುರಸ್ಕಾರ ಸಲ್ಲಿಸಲಾಗುತ್ತದೆ. ಅವರ ಬಿಲ್ಲುಗಳು 7ಅಡಿಗಳಷ್ಟು ಉದ್ದವಿರುವುದನ್ನು ಗಮನಿಸಿದರೆ ಈ ಅವಳಿ ವೀರರು ಆಜಾನುಬಾಹು ದೇಹ ಪ್ರಕೃತಿಯವರಾಗಿದ್ದರೆಂದು ತಿಳಿಯುತ್ತದೆ. ಇವರ ಕಾರ್ಯಕ್ಷೇತ್ರದ ಪ್ರದೇಶದ ಉದ್ದಗಲಕ್ಕೂ ಕಂಡು ಬರುವ ಕುರುಗಳು ಅವರ ಪವಾಡ ಸದೃಶ ಸಾಧನೆಗಳ ಅವಶೇಷಗಳು, ಅವರ ಆರಾಧನಾ ಕೇಂದ್ರಗಳು,ಸೀಮಂತೂರು & ಏಳಿಂಜೆಯಲ್ಲಿ ದೊರೆತಿರುವ ವೀರಗಲ್ಲು, ಅವರ ಕುರಿತಾದ ಜನ ಜನಿತ ಕಥೆಗಳು, ಪಾಡ್ದನಗಳೂ ಐತಿಹ್ಯದ ಮಹತ್ವದ ದಾಖಲೆಗಳಾಗಿದೆ.

ಕೃಪೆ:- ತುಳುನಾಡ ಬಿಲ್ಲವರು
-(ರಮಾನಾಥ ಕೋಟೆಕಾರ್)
ಪೆ.ಟೈ:- ಸುದರ್ಶನ್ ಪೂಜಾರಿ ಶ್ರೀ ದುರ್ಗಾ.

0 comments: