Tuesday, January 23, 2018

ಬಿಲ್ಲವರ ಗುತ್ತು ಮನೆತನಗಳು : ಕಾರಂದೂರು ಬರಿಕೆ (ಬರ್ಕೆ)

ಬಂಟ್ವಾಳದ ಮಚ್ಚಿನ ಗ್ರಾಮದಲ್ಲಿರುವ ಕಾರಂದೂರು ಬರಿಕೆಯು ಸುತ್ತು ಮುದಲಿನ ವಿಶಾಲ ಮನೆಯಾಗಿದೆ. ಇದರ ಹೆಬ್ಬಾಗಿಲು ಉತ್ತರಕಿದ್ದು ಪೂರ್ವಾಭಿಮುಖದ ಚಾವಡಿಯಲ್ಲಿ ಆಕರ್ಷಕ ಬೋಧಿಗೆ ಕಂಬಗಳಿವೆ. ಬಂಗೇರ ಬಳಿಯ ಈ ಮನೆತನಕ್ಕೆ ಕಾಂಜವ ಬೈದ್ಯರು ಮೂಲ ಪುರುಷರು. ಇವರಿಗೆ ಈ ಮನೆಯಲ್ಲಿ ಪೂಜೆಗಳು ಸಲ್ಲಿಸಲಾಗುತ್ತಿದೆ. ಕಳೆದ ಶತಮಾನದಲ್ಲಿ ವಾಸವಿದ್ದ ಚೆನ್ನಪ್ಪ ಪೂಜಾರಿಯವರು ಊರಿನವರ ಕಷ್ಟಸುಖಗಳಲ್ಲಿ ಸ್ಪಂದಿಸಿ ಜನಾನುರಾಗಿ ಆಗಿದ್ದರು. ಚೆನ್ನಪ್ಪ ಪೂಜಾರಿಯವರ ಕಾಲದಲ್ಲಿ 800 ಮುಡಿ ಸ್ವಾರ್ಜಿತ ಭೂಮಿ ಈ ಕುಟುಂಬಕ್ಕೆ ಇತ್ತು. ಕ್ರೈಸ್ತರು, ಮರಾಠಿ ನಾಯಕರು, ಬಿಲ್ಲವರು, ಮುಸ್ಲಿಮರು ಹೀಗೆ ಒಟ್ಟಾಗಿ 20 ಒಕ್ಕಲು ಮನೆಗಳು ಇದ್ದವು.

ಭೂಮಸೂದೆಯಿಂದ 700 ಮುಡಿ ಕೃಷಿ ಭೂಮಿ ಗೇಣಿದಾರರಿಗೆ ಹಸ್ತಾಂತರವಾಯಿತು. ಸದ್ಯ ಕಾರಂದೂರು ಬರ್ಕೆಗೆ 20 ಎಕ್ರೆ ಭೂಮಿ ಮಾತ್ರ ಉಳಿದಿದೆ. ಗ್ರಾಮದ ಮೊದಲನೆ ಗೌರವಕ್ಕೆ ಪಾತ್ರವಾದ ಮನೆಯಲ್ಲದೆ, ಊರ ದೇವಸ್ಥಾನ ಮತ್ತು ದೈವಸ್ಥಾನಗಳಲ್ಲಿ ವಿಶೇಷ ಮಾನ್ಯತೆಗಳು ಸಲುತ್ತದೆ. ಊರಿನ ತಂಟೆ ತಕರಾರುಗಳು ಇಲ್ಲಿ ಇತ್ಯರ್ಥವಾಗುತ್ತಿತ್ತು. ಊರಿನ ಪಟೇಲರು, ಬಂಟರು, ಸ್ವಜಾತಿ ಭಾಂದವರು ಕೂಡಿ ಈ ಮನೆಯಲ್ಲಿ ನ್ಯಾಯ ತೀರ್ಮಾನ ನೀಡುತ್ತಿದ್ದರು. ಮನೆಯ ಮಾಹಿತಿಯನ್ನು ಕೊಟ್ಟಂತಹ ವಿಶ್ವನಾಥ ಬಂಗೇರರು ಎಗ್ರಿಕಲ್ಚರ್ ಡಿಪಾರ್ಟ್ಮೆಂಟ್ ನ ಡೆಪ್ಯುಟಿ ಡೈರೆಕ್ಟರ್ ಆಗಿದ್ದವರು.

ಚಾವಡಿಯ ಮಧ್ಯ ಭಾಗದಲ್ಲಿ ದೈವಗಳ ಸಾನಿದ್ಯವಿದೆ. ಮಧ್ಯ ದಲ್ಲಿ ಕಾರಂದ್ರಾಯ ದೈವದ ಬೆಳ್ಳಿಯ ಮೂರ್ತಿಯಿದೆ. ಅದರ ಬಲ ಭಾಗದಲ್ಲಿ ಬೆಳ್ಳಿಯ ಗುರಾಣಿ ಮತ್ತು ಖಡ್ಗವಿದೆ. ಪ್ರತ್ಯೇಕ ಮಂಚದಲ್ಲಿ ಜುಮಾದಿ ಬಲಭಾಗದಲ್ಲಿ ಹಿರಿಯಾಕ್ಲುಗಳ ನಾಲ್ಕು ಪ್ರತಿಮೆಗಳಿವೆ. ಉತ್ತರಾಭಿಮುಖದ ಮಂಚದಲ್ಲಿ ಕಲ್ಲುರ್ಟಿ-ಪಂಜುರ್ಲಿ ದೈವಗಳ ಪ್ರತಿಮೆಗಳಿವೆ. ಚಾವಡಿಯ ಎಡಪಾರ್ಶ್ವದ ಕೋಣೆಯಲ್ಲಿ ಅಜ್ಜೆರು ಭಟ್ರು ಮತ್ತು ಮಂತ್ರಜಾವದೆಯ ಮೂರ್ತಿಗಳಿವೆ. ಇವುಗಳ ಬಲಭಾಗದಲ್ಲಿ ಭಟ್ಟರ ಪರಿವಾರದ 5 ಮೂರ್ತಿಗಳಿವೆ.(ಒಂದು ಕಲ್ಲುರ್ಟಿಯ ಮೂರ್ತಿ) ಎಡಭಾಗದಲ್ಲಿ ಅಜ್ಜೆರ ಪರಿವಾರದ 7 ಮೂರ್ತಿಗಳಿವೆ. ಅಜ್ಜೆರು ಭಟ್ರ ಪೂಜೆಯನ್ನು ಗಂಡಸರೇ ಮಾಡಬೇಕೆಂಬ ನಿಯಮವಿದೆ. ಅಜ್ಜೆರ್ ಭಟ್ಟರಿಗೆ Lakshmi G Prasadಏಪ್ರಿಲ್ ತಿಂಗಳಲ್ಲಿ ಪೂಜೆ ನಡೆಯುತ್ತದೆ.

ಇಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ ಈಗ ಉಡುಪಿ ಮತ್ತು ಉಪ್ಪಿನಂಗಡಿಯಲ್ಲಿ ನೆಲೆಸಿರುವ ಶಿವಳ್ಳಿ ಬ್ರಾಹ್ಮಣ ಕುಟುಂಬ ಏಪ್ರಿಲ್ ತಿಂಗಳ ಅಮಾವಾಸ್ಯೆಯಂದು ಈ ಮನೆಗೆ ಬಂದು ಬಾವಿಯಿಂದ ತಾನೇ ನೀರು ಸೇದಿ ಸ್ನಾನ ಮಾಡಿ ತಾವು ತಂದ ಪೂಜಾ ಪರಿಕರಗಳಿಂದ ಅಜ್ಜೆರು ಭಟ್ಟರಿಗೆ ಪೂಜೆಯನ್ನು ಸಲ್ಲಿಸುತ್ತಾರೆ. ಇದಕ್ಕೆ ಒಂದು ಹಿನ್ನೆಲೆಯಿದೆ. ಸುಮಾರು ವರ್ಷಗಳ ಹಿಂದೆ ಎಡವಟ್ನಾಯ ಎಂಬ ಕುಲನಾಮದ ಒಬ್ಬ ಬ್ರಾಹ್ಮಣ ಮಂತ್ರವಾದಿಯು ಕಾರಂದೂರು ಬರ್ಕೆಯ ಪ್ರದೇಶಕ್ಕೆ ಒಂದು ಶಕ್ತಿಯ ಉಚ್ಚಾಟನೆಗಾಗಿ ಬರುತ್ತಾರೆ. ಅಂತಹ ಸಮಯದಲ್ಲಿ ತಮ್ಮನ್ನು ತಾವು ದಿಗ್ಬಂಧನಗೊಳಿಸಲು ಮರೆತುಹೋಗುತ್ತಾರೆ. ಉಚ್ಛಾಟನೆ ಕೆಲಸ ಮುಗಿಸಿಕೊಂಡು ಹಿಂತಿರುಗುವಾಗ ಕಾರಂದೂರು ಬರ್ಕೆಯ ಅಜ್ಜೆರು ದೈವಗಳು ಇವರನ್ನು ಹಿಂಬಾಲಿಸಿ ಮನೆಗೆ ಹೋಗುತ್ತವೆ.

ಬಾಗಿಲ ಬಳಿಯಲ್ಲಿ ಮೂರು ಬಾರಿ ಎಡವಟ್ನಾಯೆರೆ ಎಂದು ಕರೆಯುತ್ತವೆ. ಬಾಗಿಲು ತೆಗೆದ ಎಡವಟ್ನಾಯರನ್ನು ಮಾಯ ಮಾಡಿ ಸೇರಿಗೆಗೆ ಸೇರಿಸಿ ಕಾರಂದೂರು ಬರ್ಕೆಯಲ್ಲಿ ನೆಲೆಯಾಗುವಂತೆ ಮಾಡುತ್ತವೆ. ಎಡವಟ್ನಾಯರ ಅಂತ್ಯಸಂಸ್ಕಾರ ಮಾಡಿದ ಅವರ ಕುಟುಂಬಕ್ಕೆ ದೋಷಗಳು ಕಾಣಿಸಿ ಸತ್ತ ವ್ಯಕ್ತಿಗೆ ಮೋಕ್ಷ ಸಿಕ್ಕಿಲ್ಲ ಅವರು ದೈವವಾಗಿ ಕಾರಂದೂರು ಬರ್ಕೆಯಲ್ಲಿ ನೆಲೆಯಾಗಿದ್ದಾರೆ. ಅವರ ಕುಟುಂಬ ಅಲ್ಲಿ ಹೋಗಿ ಪ್ರತೀ ವರ್ಷ ಪೂಜೆಮಾಡ ಬೇಕು ಆವಾಗ ಎಲ್ಲವೂ ಸರಿಯಾಗಿ ದೋಷ ನಿವಾರಣೆಯಾಗುತ್ತದೆಂದು ಪ್ರಶ್ನೆ ಯಲ್ಲಿ ತಿಳಿದುಬರುತ್ತದೆ. ಅದೇ ರೀತಿ ಆ ಕುಟುಂಬದ ಎರಡು ಕವಲು ಈಗಲೂ ಈ ಮನೆಗೆ ಬಂದು ಪೂಜೆಮಾಡಿ ತಮ್ಮ ಮನೆಯಲ್ಲಿ ಕೆಲವು ಕರ್ಮಗಳನ್ನು ಮುಗಿಸುತ್ತಾರೆ. ಇದೇ ರೀತಿಯ ಸಂಪ್ರದಾಯ ಕೌಡೋಡಿ ಗುತ್ತಿನಲ್ಲಿಯೂ ಇದ್ದು ಅಲ್ಲಿನ ಅಜ್ಜೆರು ಭಟ್ಟರನ್ನು ಆರಾಧಿಸುವ ಕುಟುಂಬಗಳು ಚಿಕ್ಕಮಗಳೂರು ಮತ್ತು ಬೆಂಗಳೂರಿನಲ್ಲಿದ್ದು ಅವರೂ ವರ್ಷಕ್ಕೊಮ್ಮೆ ಬಂದು ಪೂಜೆ ಸಲ್ಲಿಸುತ್ತಾರೆ. ಇದಕ್ಕೆ ಕಾರಣಗಳು ಬೇರೆ ಇರಬಹುದಾದರು ತಿಳಿದು ಬಂದಿಲ್ಲ.

ಮನೆಯ ದಕ್ಷಿಣ ಭಾಗದಲ್ಲಿ ಬಹುದೊಡ್ಡ ಹಟ್ಟಿ ಇದೆ. 7-8 ಜೋಡಿ ಉಳುವ ಕೋಣಗಳಿದ್ದ ಕಾಲ ಒಂದಿತ್ತು. ಆ ಕಾಲದಲ್ಲಿ ಹಸುಗಳ ದೊಡ್ಡ ಗುಂಪೇ ಇದ್ದಿತೆಂಬುದಕ್ಕೆ ವಿಶಾಲ ಹಟ್ಟಿಗೆ ಸಾಕ್ಷಿ. ದಿನ ನಿತ್ಯದ ಕೆಲಸಕ್ಕಾಗಿ 50ಕ್ಕೂ ಹೆಚ್ಚು ಕೆಲಸಗಾರರಿದ್ದ ಈ ಮನೆಯಲ್ಲಿ ಕೃಷಿ ಕೆಲಸ ಎಷ್ಟು ಸಮೃದ್ಧವಾಗಿತ್ತು ಎಂದು ತಿಳಿಯಬಹುದು.ಮನೆಯ ಪಶ್ಚಿಮ ಭಾಗದಲ್ಲಿ ಹೆರಿಗೆಯ ಕೋಣೆ ಇದೆ. ಚಾವಡಿಯ ಎಡಭಾಗದ ಕೋಣೆಯಲ್ಲಿ ಭತ್ತ ಕುಟ್ಟುತ್ತಿದ್ದ ಒರಳಿನಲ್ಲಿ ಗುಂಡಿಗಳು ಮತ್ತು ಒನಕೆಗಳು ಈಗ ಮೌನವಾಗಿವೆ.

ಮನೆಯ ಕೆಳಗಿನ ಭಾಗದ ಗುಂಡಿಮಾರು ಗದ್ದೆಯಲ್ಲಿ ಸುಗ್ಗಿ ಮತ್ತು ಏಣೆಲು ಬೆಳೆಗಳನ್ನು ಕೊಯ್ಯುವ ಮೊದಲು ಮೂಲದವರಾದ ಮುಗೇರರು ಬಂದು ಹಾಲು ಇಟ್ಟು ಪ್ರಾರ್ಥಿಸುವ ಸಂಪ್ರದಾಯವಿದೆ. ಸೂತಕವಾದ ಹೆಂಗಸರು ಈ ಗದ್ದೆಗೆ ಇಳಿಯಲು ನಿಷೇದವಿದೆ. ಹೀಗೆ ಕಾರಂದೂರು ಬರ್ಕೆ ಮನೆಯು ಅನೇಕ ಇತಿಹಾಸಗಳುನ್ನು ಹೊಂದಿದೆ.

(ಆಕರ - ಗರುತು. ಬಿಲ್ಲವರ ಗುತ್ತುಗಳು . ಮಾಹಿತಿ ಸಂಗ್ರಹ ಮತ್ತು ಗ್ರಂಥ ಸಂಪಾದಕರುಗಳು- ಬಿ.ಎಂ ರೋಹಿಣಿ, ರಮಾನಾಥ್ ಕೋಟೆಕಾರ್, ಮುದ್ದು ಮೂಡುಬೆಳ್ಳೆ. . ) ಸಂಕೇತ್ ಪೂಜಾರಿ

0 comments: