Friday, March 15, 2019

ವೇಷಧಾರಿ ಹುಡುಗನೊಬ್ಬ ಭಾಗವತನಾದ ಸಹಯಾನ ಹೆಮ್ಮೆಯ ಭಾಗವತರು ರವಿಚಂದ್ರ ಕನ್ನಡಿಕಟ್ಟೆ

 ♻ವೇಷಧಾರಿ ಹುಡುಗನೊಬ್ಬ ಭಾಗವತನಾದ ಸಹಯಾನ♻

  ♻ 🔅ಅದು ಸುರತ್ಕಲ್ ಮೇಳ ವಿಜೃಂಭಿಸುತ್ತಿದ್ದ ದಿನಗಳು.ಆ ಮೇಳದ ಆಟಕ್ಕೇಂದೆ ಪ್ರಬುದ್ಧ ಪ್ರೇಕ್ಷಕರಾಧಿ ಸಕ  ಲರೂ ಕಾಯುತ್ತಿದ್ದ ಕಾಲ.ಈಗಿನ ಖ್ಯಾತ ಯುವಭಾಗವತ ರವಿಚಂದ್ರ ಪೂಜಾರಿ ಕನ್ನಡಿಕಟ್ಟೆಯವರು ಆಗ ಸುರತ್ಕಲ್ ಮೇಳದಲ್ಲಿ ಪೀಠಿಕೆ ಸ್ತ್ರೀ ವೇಷ ಮಾಡುತ್ತಿದ್ದರು. ಧರ್ಮಸ್ಥಳ ಕೇಂದ್ರ ದಲ್ಲಿ ಕಲಿತು ವೇಷಧಾರಿ ಆಗುವ ಹಂಬಲದಲ್ಲಿ ಸುರತ್ಕಲ್ ಮೇಳ ಸೇರಿದ ಅವರಿಗೆ ಪುಂಡು ವೇಷದಲ್ಲೇ ಇಷ್ಟ.ಸ್ತ್ರೀ ವೇಷ ಸಿಕ್ಕರೆ ಏನೊ ಅಳುಕು -ನಾಚಿಕೆ !  ರಂಗಸ್ಥಳದಲ್ಲವರು ಏನು ಮಾಡುತ್ತಿದ್ದರೆಂದರೆ ಹಿಮ್ಮೇಳದ ತಾಳವನ್ನು ಎದೆಯ ಹಾರ ಹಿಡ್ಕೊಂಡು ಎರಡೂ ಕೈಗಳಲ್ಲಿ ಬಡಿಯುತ್ತಿದ್ದರಂತೆ.ಪಾತ್ರ ನಿಂತುಕೊಂಡಿದ್ದರು ಇವರ ಕೈ ಮಾತ್ರ ಎದೆಯ ಹಾರದಲ್ಲೇ ಇರುತ್ತಿತ್ತು. ಕೈ ಬೆರಳುಗಳು ಕುಣಿಯುತ್ತಿತ್ತು. ಒಂದು ವರ್ಷ ಏನಾಯಿತೆಂದರೆ ಮೇಳದ ಹೊಸ ತಿರುಗಾಟ ದಲ್ಲಿ ಸಂಗೀತಕ್ಕೆ ಪದ್ಯಾಣ ದ ರವಿಚಂದ್ರ ಎಂಬವರು ಬರುತ್ತಾರೆಂದು ಒಪ್ಪಂದವಾಯಿತು. ಸುಮಾರು ೨೫ ಸಾವಿರ ಕರಪತ್ರ ಮುದ್ರಣವು ಆ ಹೆಸರನ್ನು ಉಲ್ಲೇಖಿಸಿ ನಡೆಯಿತು. ಮೇಳ ಹೊರಡಲು ಒಂದೆರಡು ದಿನವಿದೆ ಎನ್ನುವಾಗ ಆ ವ್ಯಕ್ತಿ ನಾನು ತಿರುಗಾಟ ಕ್ಕೆ ಬರುವುದಿಲ್ಲ ಎಂದು ತಿಳಿಸಿ ಏನೋ ಕಾರಣ ಕೊಟ್ಟರಂತೆ. ರವಿಚಂದ್ರ ಎಂಬ ಹೆಸರು ಮುದ್ರಿಸಿ ಪ್ರಚಾರ ಮಾಡಿಯಾಗಿದೆ.ಏನು ಮಾಡುವುದೆಂದರಿಯದೇ ಮೇಳದ ದನಿಗಳು ಮತ್ತು ಭಾಗವತರು ಚಿಂತಿತರಾಗಿದ್ದರು . ಆ ಹೊತ್ತಿಗೆ ಮೇಳದ ಮುಖ್ಯ ಭಾಗವತರಾಗಿದ್ದ ಪದ್ಯಾಣ ಗಣಪತಿ ಭಟ್ಟರ ತಲೆಗೆ ಮಿಂಚು ಹೊಡೆದಂತೆ ಒಂದು ಕಲ್ಪನೆ ಹೊಳೆಯಿತು.ಆತ ವೇಷ ಮಾಡಿ ರಂಗದಲ್ಲಿ ಹಾರ ಹಿಡಿದು ಕೈ ಗಳಿಂದ  ತಾಳ ಹಾಕುವುದನ್ನು ಮೊದಲೇ ಗಮನಿಸಿದ್ದರು. ಒಂದು ದಿನ ಅನಿವಾರ್ಯತೆಯ ಹಿನ್ನೆಲೆಯಲ್ಲಿ "ನೀನು ಭಾಗವತಿಕೆ ಕಲಿಯುತ್ತಿಯೇನೊ?" ಎಂದು ಪದ್ಯಾಣರು ಕೇಳಿಯೇ ಬಿಟ್ಟರು. ! ಅಂದು ಹುಡುಗನಾಗಿದ್ದ ರವಿಚಂದ್ರ ಇದನ್ನೇ ಕಾಯುತ್ತಿದ್ದವನಂತೆ "ನಾಳೆಯಿಂದಲೇ ಕಲಿಸಿಕೊಡಿ" ಎಂದು ದುಂಬಾಲು ಬಿದ್ದನಂತೆ.ರಾತ್ರಿ ಆಟದಲ್ಲಿ ವೇಷ ಮಾಡುತ್ತಿದ್ದ ಹುಡುಗ ರವಿಗೆ  ಪದ್ಯಾಣರು ಹಗಲು ನಿದ್ದೆಗೆಟ್ಟು  ಪೂರ್ವ ರಂಗದ ಸಂಗೀತಕ್ಕೆ ಬೇಕಾದ ಪದ್ಯ ಹಾಡುವುದನ್ನು ಕಲಿಸಿ ಕೊಟ್ಟರು.ಆಸಕ್ತಿ ಮತ್ತು ಶ್ರದ್ಧೆ ಎರಡೂ ಇದ್ದ ರವಿಚಂದ್ರ ಹೇಳಿಕೊಟ್ಟದ್ದನ್ನು ಅತಿ ಶೀಘ್ರದಲ್ಲಿ ಕಲಿತು ಆರಂಭದಲ್ಲೇ ಗುರುಗಳನ್ನು ಬೆರಗಾಗಿಸಿ ಬಿಟ್ಟ.! ಕೇವಲ ಮೂರೇ ದಿನದ ಕಲಿಕೆ. ನಾಲ್ಕನೇ ದಿನ ಮೇಳದ ಯಜಮಾನ ರ ಅಪ್ಪಣೆಯಂತೆ ವೇಷಧಾರಿ ರವಿಚಂದ್ರ *ಸಂಗೀತಗಾರ ರವಿಚಂದ್ರ*ನಾಗಿ ಸುರತ್ಕಲ್ ಮೇಳದಲ್ಲಿ ಪದ್ಯ ಹೇಳಿದರು. ಮೊದಲ ದಿನದಲ್ಲೇ ಭಾಗವತರು ಮತ್ತು ಯಜಮಾನರಿಂದ ಪ್ರಶಂಸೆ ಪಡೆದ ಹುಡುಗ ಮತ್ತೆ ವೇಷ ಮಾಡಿದ್ದೇ ಇಲ್ಲ. ಹೇಗೂ ಸಂಗೀತ ಕ್ಕೆ ರವಿಚಂದ್ರ ಎಂಬ ಹೆಸರನ್ನು ಮೊದಲೇ ಮುದ್ರಿಸಿಯಾಗಿದೆ.ಇಬ್ಬರೂ ರವಿಚಂದ್ರ ರೇ ಆದ ಕಾರಣ ಯಜಮಾನರ ಪಾಲಿಗೆ ಸಮಸ್ಯೆ ತಪ್ಪಿದಂತಾಯಿತು.ಇಷ್ಟಕ್ಕೂ ಮೊದಲು ಮುದ್ರಸಿದ ರವಿಚಂದ್ರ ಪದ್ಯಾಣ ಭಾಗವತ ಗಣಪಣ್ಣನ ಪಾಲಿಗೆ ದೂರದ ಸಂಬಂಧಿಕರು. ಆದರೆ ಅನಿವಾರ್ಯ ಮತ್ತು ಕಾಕತಾಳೀಯವಾಗಿ ಆ ಜಾಗದಲ್ಲಿ ಕೂತು ಭಾಗವತನಾಗುವ ಯೋಗ ಸಿಕ್ಕಿದ್ದು ವೇಷಧಾರಿಯಾಗುವ ಕನಸಿನಿಂದ ಬಂದ ರವಿಚಂದ್ರ ಕನ್ನಡಿಕಟ್ಟೆಗೆ.      ಹೀಗೆ ಪದ್ಯಾಣರ ನೆರಳಿನಲ್ಲೇ ಭಾಗವತಿಕೆ ಕಲಿತು ಬೆಳೆದ ರವಿಚಂದ್ರ ಕನ್ನಡಿಕಟ್ಟೆಗೆ ರಂಗಲಯದ ಅರಿವಿದೆ.ಮುಮ್ಮೇಳ ನಾಟ್ಯಗಳ ಜ್ಞಾನವಿದೆ.ಯಕ್ಷಗಾನದ ಸಮಗ್ರ ಪಾಠವಾಗಿದೆ.ಪದ್ಯಾಣರ ನೆರಳಿನಂತೆಯೇ ಅವರನ್ನು ಹಿಂಬಾಲಿಸಿದ ಕನ್ನಡಿಕಟ್ಟೆ ಅವರನ್ನು ಒಂದರ್ಥದಲ್ಲಿ ಮಗನಂತೆಯೇ ಸಾಕಿ -ಸಲಹಿದ್ದಾರೆ. ಶಿಷ್ಯತನವನ್ನಿತ್ತು ಪ್ರೀತಿಯಿಂದ ಮೈದಡವಿ ಹಾರೈಸಿ ತನ್ನ ಪದ್ಯಾಣತನದ ಉತ್ತರಾಧಿಕಾರವನ್ನಿತ್ತಿದ್ದಾರೆ.ಇಂದೀಗ ಪದ್ಯಾಣ ಶೈಲಿಯ ಕೆಲವು ಅಪ್ಪಟತನಗಳಿದ್ದರೆ ಅದು ರವಿಚಂದ್ರ ಕನ್ನಡಿಕಟ್ಟೆ ಅವರಲ್ಲಿ ಮಾತ್ರ! ಕಾರಣ ಕಲ್ಮಡ್ಕದ ಪದ್ಯಾಣರ ಮನೆ "ಗಂಧರ್ವ" ದಲ್ಲಿ ರವಿಚಂದ್ರರು ಕಲಿತ್ತದ್ದು ಒಂದೆರಡು ವರ್ಷವಲ್ಲ ಬರೋಬ್ಬರಿ ಎಂಟು ವರ್ಷ! .ಜೊತೆಗೆ ಸುದೀರ್ಘವಾದ ಸಹಯಾನ. ಸಂಗೀತಗಾರನೊಬ್ಬ ಕೈ ಕೊಟ್ಟ ಕಾರಣ ವೇಷಧಾರಿ ಹುಡುಗನೊಬ್ನ ಭಾಗವತನಾದ ಎಂಬುದಷ್ಟೇ  ಇಲ್ಲಿನ ಕತೆಯಲ್ಲ..ವೇಷ ಮಾಡಲು ಬಂದ ಹುಡುಗನೊಳೊಗೆ ಭಾಗವತಿಕೆಯ ಪ್ರಜ್ಞೆಯಿತ್ತು ಎಂಬುದನ್ನು ಗುರುತಿಸಿದ ಗುರುವಿನ ಪ್ರಜ್ಞೆಯೂ ಇಲ್ಲಿದೆ. ಯಕ್ಷಗಾನದಲ್ಲಿ ಹೀಗೆ ಅನೇಕ ಕಲಾವಿದರು ರೂಪುಗೊಂಡಿದ್ದಾರೆ.ಆದರೆ ಪದ್ಯಾಣ ಮತ್ತು ರವಿಚಂದ್ರ ಪೂಜಾರಿ ಕನ್ನಡಿಕಟ್ಟೆ ಅವರ ಗುರು ಶಿಷ್ಯ ಸಾಂಗತ್ಯ ಒಂದು ರೋಚಕ ಕಥೆ.♻ 🔅

1 comment:

  1. ನಮ್ಮ ನೆಚ್ಚಿನ ಭಾಗವತರು! ಗುರು-ಶಿಷ್ಯರಿಗೆ ಶುಭ ಹಾರೈಕೆಗಳು!

    ReplyDelete